ಬಂಟ್ವಾಳ : ಬಸ್ ನಲ್ಲಿ ಯುವತಿಯ ಮೈಕೈ ಮುಟ್ಟಿದ ಆರೋಪ, ಕೂಲಿ ಕಾರ್ಮಿಕನಿಗೆ ಥಳಿತ – ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲಿಸಿದ ಪೋಲಿಸರು

ನ್ಯೂಸ್ ಆ್ಯರೋ : ಮಹಿಳೆಯರ ಮೈ ಕೈ ಮುಟ್ಟಿದ್ದಾನೆಂದಿ ಆರೋಪಿಸಿ ಕೂಲಿ ಕಾರ್ಮಿಕನೊಬ್ಬನಿಗೆ ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿಯ ಕುದ್ಕೋಳಿ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಲರ್ಟ್ ಆದ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಬಂಟ್ವಾಳ ಮೂಲರಪಟ್ನ ಇಸಾಕ್ (45) ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ತಾಣಗಳಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಬಿ.ಸಿ. ರೋಡ್ ಮಾರ್ಗವಾಗಿ ಮೂಡಬಿದ್ರೆಗೆ ಬಸ್ ನಲ್ಲಿ ತೆರಳುತ್ತಿದ್ದ ಕೂಲಿ ಕಾರ್ಮಿಕ ಇಸಾಕ್ ಗೆ ಮಹಿಳೆಯರಿಗೆ ಮೈ ಕೈ ತಾಗಿದ ವಿಚಾರದಲ್ಲಿ ತಗಾದೆ ತೆಗೆದು ಹಲ್ಲೆ ನಡೆಸಲಾಗಿದೆ.
ರಾಯಿ ಬಳಿ ಬಸ್ಸಿನಿಂದ ಇಳಿಸಿ ಕಂಡಕ್ಟರ್ ಮಾತಿನ ಚಕಮಕಿ ನಡೆಸಿದ್ದು, ಬಳಿಕ ಸ್ಥಳಕ್ಕೆ ಬಂದ ಯುವಕರ ತಂಡದಿಂದ ಗಂಭೀರ ಹಲ್ಲೆ ನಡೆದಿದೆ ಎಂದು ದೂರಲಾಗಿದೆ. ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರೋ ಆರೋಪ ವ್ಯಕ್ತವಾಗಿದ್ದು, ಬೆನ್ನು ಮತ್ತು ಇಡೀ ಮೈಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡಲಾಗಿದೆ.
ಗಂಭೀರ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಇಸಾಕ್ ಹೇಳಿಕೆ ನೀಡಿದ್ದು, ಬೆಳಿಗ್ಗೆ ಬಿ.ಸಿ.ರೋಡ್ ನಿಂದ ಮೂಡಬಿದ್ರೆಗೆ ಬಸ್ಸಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದೆ. ಈ ವೇಳೆ ಕುಳಿತಿದ್ದ ನನ್ನ ಕೈಗೆ ಒಬ್ಬಳು ವಿದ್ಯಾರ್ಥಿನಿ ತನ್ನ ಬ್ಯಾಗ್ ಕೊಟ್ಟಿದ್ದಳು. ರಾಯಿ ಬಳಿ ಇಳಿಯುವಾಗ ಬ್ಯಾಗ್ ತೆಗೆದುಕೊಂಡು ಹೋದಳು.
ಆದರೆ ಈ ವೇಳೆ ಕಂಡೆಕ್ಟರ್ ಮಹಿಳೆಯರ ಮೈಕೈ ಮುಟ್ಟುತ್ತೀಯಾ ಅಂತ ಗಲಾಟೆ ಮಾಡಿದ. ರಾಯಿಯಿಂದ ಸ್ವಲ್ಪ ಎದುರು ಕುದ್ಕೋಳಿಯಲ್ಲಿ ಇಳಿಸಿ ಗಲಾಟೆ ಮಾಡಿದ. ಆಗ ಅಲ್ಲಿ ಮೊದಲೇ ಕೆಲ ಯುವಕರು ಬಂದು ನಿಂತಿದ್ದರು. ಅವರು ಆಟೋ ರಿಕ್ಷಾದಲ್ಲಿ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು.
ಅಲ್ಲಿ ಗೋಲಿ ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ರು. ಕಣ್ಣು, ಬೆನ್ನು, ಕೈ ಕಾಲಿಗೆ ಮನಸೋ ಇಚ್ಚೆ ಥಳಿಸಿದ್ರು. ಆ ಬಳಿಕ ಪೊಲೀಸರು ಬಂದು ಜೀಪಿನಲ್ಲಿ ಹಾಕಿ ನನ್ನನ್ನ ಕರೆದುಕೊಂಡು ಹೋದ್ರು ಎಂದು ದೂರಿದ್ದಾರೆ. ಅಲ್ಲದೇ ನಾನು ನಿತ್ಯ ಅದೇ ಬಸ್ಸಿನಲ್ಲಿ ಹೋಗ್ತಾ ಇದ್ದೆ, ಕಂಡೆಕ್ಟರ್ ಪರಿಚಯವಿದೆ. ಆದರೆ ಹಲ್ಲೆ ಮಾಡಿದ ಯುವಕರ ಬಗ್ಗೆ ಗೊತ್ತಿಲ್ಲ, ನೋಡಿದರೆ ಗುರುತು ಸಿಗುತ್ತೆ ಎಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಬಂಧನವಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.