ಬಂಟ್ವಾಳ : ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದ ವೇಳೆ ಕಳ್ಳರ ಕೈಚಳಕ – ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ನಗ ನಗದು ಮತ್ತು ಅಡಿಕೆ ದರೋಡೆ

ನ್ಯೂಸ್ ಆ್ಯರೋ : ಒಬ್ಬಂಟಿಯಾಗಿ ಮನೆಯಲ್ಲಿದ್ದ ವೇಳೆ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ಬಳಿಕ ದರೋಡೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಡೆಕಾನ ಎಂಬಲ್ಲಿ ಡಿ.22 ರಂದು ಗುರುವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ನಡೆದಿದೆ.

ಬರಿಮಾರು ಗ್ರಾಮದ ಕಡೆಕಾನ ನಿವಾಸಿ ರೋಹಿತ್ ಎಂಬವರ ಪತ್ನಿ ಪವಿತ್ರ ಎಂಬಾಕೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಮನೆಯಿಂದ ರಾಬರಿ ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ :
ರೋಹಿತ್ ಕುಮಾರ್ ಅವರು ಐಸ್ ಕ್ರೀಂ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಪವಿತ್ರ ಮನೆಯಲ್ಲಿರುತ್ತಿದ್ದರು. ಇವರ ಜೊತೆಗೆ ರೋಹಿತ್ ಅವರ ಇಬ್ಬರು ಮಕ್ಕಳು ಮನೆಯಲ್ಲಿದ್ದಾರೆ.

ಗುರುವಾರ ಮಕ್ಕಳಿಬ್ಬರೂ ಮೂಡಬಿದಿರೆಯಲ್ಲಿ ನಡೆಯುವ ಜಾಂಬೂರಿ ಕಾರ್ಯಕ್ರಮಕ್ಕೆ ತೆರಳಿದ್ದರೆ, ಗಂಡ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ.
ಸಂಜೆ ಸುಮಾರು 6.30 ರ ವೇಳೆ ಪವಿತ್ರ ಅವರು ಮನೆಯ ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮನೆಯ ಮಾಡಿಗೆ ಕಲ್ಲು ಹೊಡೆದ ಶಬ್ದವಾಗಿತ್ತು. ಆ ಬಳಿಕ ಮನೆಯ ಕಿಟಕಿ ಬಾಗಿಲಿನ ಗಾಜಿಗೆ ಕಲ್ಲು ಎಸೆಯಲಾಗಿತ್ತು.

ಸ್ನಾನ ಮಾಡಿ ಹೊರ ಬಂದು ನೋಡಿದಾಗ ಯಾರು ಕಾಣದ ಕಾರಣ ಯಾರೂ ಇಲ್ಲ ಅಂತ ವಾಪಾಸ್ ಬಾತ್ ರೂಮ್ ನ ಬಾಗಿಲು ಹಾಕಲು ಬರುವ ವೇಳೆ ಇಬ್ಬರು ಮುಸುಕುಧಾರಿ ಅಪರಿಚಿತ ವ್ಯಕ್ತಿಗಳು ಏಕಾಏಕಿ ಪವಿತ್ರ ಅವರನ್ನು ಎಳೆದುಕೊಂಡು ಹೋಗಿ ಮನೆಯ ಆಂಗಳದಲ್ಲಿದ್ದ ಅಡಿಕೆ ಮರದ ಕಂಬಕ್ಕೆ ನೈಲಾನ್ ಹಗ್ಗದಿಂದ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದು, ಕರಿಮಣಿಸರ ದೋಚಿದ್ದಾರೆ ಎನ್ನಲಾಗಿದೆ.
ಬಳಿಕ ಮನೆಯೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಟೇಬಲ್ ಮೇಲೆ ಇದ್ದ ನಗದು 4 ಸಾವಿರ ಹಾಗೂ ಅಂಗಳದಲ್ಲಿದ್ದ ಅಡಿಕೆ ಗೋಣಿಯನ್ನು ಕೊಂಡು ಹೋಗಿದ್ದಲ್ಲದೇ ಕಪಾಟು ಒಳಗೆ ಜಾಲಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪವಿತ್ರ ಅವರನ್ನು ಕಟ್ಟಿ ಹಾಕಿದ ಬಗ್ಗೆ ಯಾರೂ ಕೂಡ ಗಮನಿಸಿಲ್ಲ. ಸುಮಾರು 7 ಸುಮಾರಿಗೆ ಮನೆಯ ಸಮೀಪದ ಮನೆಯವರು ನೋಡಿ ಕಟ್ಟಿ ಹಾಕಿದ್ದನ್ನು ಬಿಚ್ಚಿದ ಬಳಿಕ ಘಟನೆಯ ಬಗ್ಗೆ ತಿಳಿದಿದ್ದು, ಬಳಿಕ ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್. ಐ.ಹರೀಶ್ ಭೇಟಿ ನೀಡಿದ್ದಾರೆ. ಇಂದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.