1. Home
  2. Business
  3. News
  4. ಹಣಕಾಸು
  5. ಸುದ್ದಿ
  6. ‘ಕಿಸಾನ್‌ ವಿಕಾಸ್‌ ಪತ್ರ’ ಯೋಜನೆಯಡಿ ಉತ್ತಮ ಬಡ್ಡಿ ಆದಾಯ – ಏನಿದು ಕಿಸಾನ್‌ ವಿಕಾಸ್‌ ಪತ್ರ? ಬಡ್ಡಿದರ ಎಷ್ಟು? ಯಾರೆಲ್ಲ ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ..

‘ಕಿಸಾನ್‌ ವಿಕಾಸ್‌ ಪತ್ರ’ ಯೋಜನೆಯಡಿ ಉತ್ತಮ ಬಡ್ಡಿ ಆದಾಯ – ಏನಿದು ಕಿಸಾನ್‌ ವಿಕಾಸ್‌ ಪತ್ರ? ಬಡ್ಡಿದರ ಎಷ್ಟು? ಯಾರೆಲ್ಲ ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ..

‘ಕಿಸಾನ್‌ ವಿಕಾಸ್‌ ಪತ್ರ’ ಯೋಜನೆಯಡಿ ಉತ್ತಮ ಬಡ್ಡಿ ಆದಾಯ – ಏನಿದು ಕಿಸಾನ್‌ ವಿಕಾಸ್‌ ಪತ್ರ? ಬಡ್ಡಿದರ ಎಷ್ಟು? ಯಾರೆಲ್ಲ ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ..
0

ನ್ಯೂಸ್ ಆ್ಯರೋ : ಮುಂದಿನ ದಿನಗಳಲ್ಲಿ ಸುರಕ್ಷಿತ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಪೋಸ್ಟ್ ಆಫೀಸ್‌ ಉಳಿತಾಯ ಯೋಜನೆಗಳಲ್ಲಿ ಒಂದಾದ ‘ಕಿಸಾನ್‌ ವಿಕಾಸ್‌ ಪತ್ರ’ ಯೋಜನೆಯಡಿ ಹೂಡಿಕೆ ಮಾಡಬಹುದು. ಈ ಯೋಜನೆಗಳಲ್ಲಿ ಉತ್ತಮ ಆದಾಯ ಪಡೆಯುವುದಲ್ಲದೆ, ನಿಮ್ಮ ಹೂಡಿಕೆಯೂ ಸುರಕ್ಷಿತವಾಗಿರುತ್ತದೆ. ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಅನ್ನು ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸೇರಿಸಲಾಗಿದೆ. ಈ ಯೋಜನೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಕಿಸಾನ್‌ ವಿಕಾಸ್‌ ಪತ್ರ?

ಅಂಚೆ ಇಲಾಖೆಯ ‘ಕಿಸಾನ್‌ ವಿಕಾಸ್‌ ಪತ್ರ’ವು ಒಂದು ರೀತಿಯ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆದಾರರ ಹಣ 10 ವರ್ಷ 2 ತಿಂಗಳಿನಲ್ಲಿ ಇಮ್ಮಡಿಯಾಗಬಹುದು. ಇದು ಕೇಂದ್ರ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದ್ದು, ಹಿಂದಿನಿಂದಲೂ ಕೇಂದ್ರ ಸರಕಾರ ಈ ರೀತಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಬದಲಾಯಿಸುತ್ತಿಲ್ಲ.

ಕಿಸಾನ್‌ ವಿಕಾಸ ಪತ್ರ ಯೋಜನೆಯು ಹೂಡಿಕೆದಾರರಿಗೆ ಖಾತರಿಯ ಆದಾಯವನ್ನು ನೀಡುತ್ತದೆ. 124 ತಿಂಗಳುಗಳಲ್ಲಿ (10 ವರ್ಷ 2 ತಿಂಗಳು) ನಿಮ್ಮ ಹೂಡಿಕೆ ದುಪ್ಪಟ್ಟು
ಆಗಬಲ್ಲುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಡ್ಡಿದರ ಎಷ್ಟು?

ಕಿಸಾನ್‌ ವಿಕಾಸ ಪತ್ರ ಯೋಜನೆಗೆ ವಾರ್ಷಿಕ ಶೇ. 6.9 ಬಡ್ಡಿ ಸಿಗುತ್ತದೆ. ಕನಿಷ್ಠ 1000 ರೂ. ಹಣ ಹೂಡಿಕೆ ಮಾಡಬೇಕಾಗುತ್ತದೆ. ಮೊದಲು ಶೇ.7.6 ಬಡ್ಡಿ ಇತ್ತು. ಆದರೆ ಈಗ ಬಡ್ಡಿ ಸ್ವಲ್ಪ ಇಳಿಕೆಯಾಗಿದೆ. ಆದರೆ ಹಣ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ.

ಹಣ ಹೂಡಿಕೆ ಮಾಡಲು ಅರ್ಹತೆ ಏನು?

ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಡಿ ಹಣ ಹೂಡಿಕೆ ಮಾಡಬಹುದು. ಕನಿಷ್ಠ 18 ವರ್ಷ ಆಗಿರಬೇಕು. ಅಪ್ರಾಪ್ತರಾಗಿದ್ದರೆ ಜಂಟಿ ಖಾತೆ ತೆರೆಯಬಹುದು. ಒಬ್ಬ ವ್ಯಕ್ತಿ ಹಲವಾರು ಕಿಸಾನ್‌ ವಿಕಾಸ್‌ ಪತ್ರಗಳನ್ನು ಕೊಳ್ಳಬಹುದು. ಈ ಪತ್ರವನ್ನು ಸಂಬಂಧಿಸಿದ ಅಂಚೆ ಕಚೇರಿಯಲ್ಲಿ ಸ್ವೀಕೃತಿ ಪತ್ರವಾಗಿ ಪಡೆದು ಭದ್ರತೆಯಾಗಿ ಅಡಮಾನವನ್ನೂ ಇಡಬಹುದು. ಒಂದು ಅಂಚೆ ಕಚೇರಿಯಿಂದ ಮತ್ತೊಂದು ಕಚೇರಿಗೆ ವರ್ಗಾಯಿಸಬಹುದು. ಟ್ರಸ್ಟ್‌ಗಳು ಕೂಡ ಹಣ ಹೂಡಿಕೆ ಮಾಡಬಹುದು. ಆದರೆ, ಅನಿವಾಸಿ ಭಾರತೀಯರು ಇದರಲ್ಲಿ ಹಣ ಹೂಡಿಕೆ ಮಾಡುವಂತಿಲ್ಲ.

ಹೂಡಿಕೆಯ ಮೊತ್ತ ಎಷ್ಟು?

ಈ ಸರ್ಕಾರಿ ಯೋಜನೆಯಲ್ಲಿ ಕನಿಷ್ಠ 1000 ರೂ.ಯಿಂದ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ನೀವು ರೂ 100 ರ ಗುಣಕಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ.

ವಯಸ್ಕರಿಗೆ ಖಾತೆ ತೆರೆಯಲು ಅವಕಾಶ

ವಯಸ್ಕರು ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರದಲ್ಲಿ ಖಾತೆಯನ್ನು ತೆರೆಯಬಹುದು. ಇದಲ್ಲದೆ, ಈ ಯೋಜನೆಯಲ್ಲಿ ಮೂರು ವಯಸ್ಕರು ಒಟ್ಟಿಗೆ ಜಂಟಿ ಖಾತೆಯನ್ನು ತೆರೆಯಬಹುದು. ಕಿಸಾನ್ ವಿಕಾಸ್ ಪತ್ರದಲ್ಲಿ, ಪೋಷಕರು ಅಪ್ರಾಪ್ತ ವಯಸ್ಕರ ಪರವಾಗಿ ಅಥವಾ ದುರ್ಬಲ ಮನಸ್ಸಿನ ವ್ಯಕ್ತಿಯ ಪರವಾಗಿ ಪೋಷಕರ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ, 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕನು ತನ್ನ ಸ್ವಂತ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.

ಅವಧಿಗೆ ಮುನ್ನ ವಿದ್ ಡ್ರಾ ಗೆ ಅನುಮತಿ

ಕಿಸಾನ್‌ ವಿಕಾಸ್‌ ಪತ್ರದಲ್ಲಿ ಖಾತೆದಾರರು ಆಕಸ್ಮಿಕವಾಗಿ ಮೃತಪಟ್ಟರೆ ಅವಧಿಗೆ ಮುನ್ನ ಹೂಡಿಕೆ ಹಿಂತೆಗೆದುಕೊಂಡು ಖಾತೆಯನ್ನು ಸ್ಥಗಿತಗೊಳಿಸಬಹುದಾಗಿದ್ದು, ಇಲ್ಲದಿದ್ದರೆ ಹೂಡಿಕೆ ಮಾಡಿದ ಎರಡೂವರೆ ವರ್ಷಗಳ ನಂತರ ಹಿಂತೆಗೆದುಕೊಳ್ಳುವ ಅವಕಾಶವೂ ಇದೆ.

ಇನ್ನೂ ಕಿಸಾನ್‌ ವಿಕಾಸ ಪತ್ರವು ಹೂಡಿಕೆಯ ಅತ್ಯಂತ ಸುರಕ್ಷಿತ ಸಾಧನವಾಗಿದೆ. ಮಾರುಕಟ್ಟೆಯ ಏರಿಳಿತಗಳು ಇದಕ್ಕೆ ಅಡ್ಡಿಯಾಗುವುದಿಲ್ಲ. ಅವಧಿ ಮುಗಿದಾಗ ಖಾತರಿಯ ಆದಾಯ ಸಿಗುತ್ತದೆ. ಆದರೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಕಡಿತದ ವ್ಯಾಪ್ತಿಗೆ ಇದು ಬರುವುದಿಲ್ಲ. ಅಂದರೆ ಇದರಲ್ಲಿ ನಿಮಗೆ ಸಿಗುವ ಆದಾಯ ತೆರಿಗೆಗೆ ಅರ್ಹವಾಗಬಹುದು. ಯಾವುದೇ ವಿನಾಯಿತಿ ಇರುವುದಿಲ್ಲ. ಹೀಗಿದ್ದರೂ ಮೂಲದಲ್ಲಿಯೇ ತೆರಿಗೆ ಕಡಿತದಿಂದ (ಟಿಡಿಎಸ್‌) ವಿನಾಯಿತಿ ಇರುತ್ತದೆ. ಆದಾಯ ತೆರಿಗೆ ಉಳಿಸಲು ಹಣ ಹೂಡಿಕೆ ಮಾಡಬೇಕು ಎಂದುಕೊಳ್ಳುವವರು ಇದನ್ನು ಗಮನಿಸಬೇಕು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..