ರಾಜ್ಯಾದ್ಯಂತ ನಾಳೆಯಿಂದ 108 ಅಂಬ್ಯುಲೆನ್ಸ್ ಸೇವೆ ಬಂದ್..?? – ಏನಾಗಲಿದೆ ಆರೋಗ್ಯ ಇಲಾಖೆಯ ಪರಿಸ್ಥಿತಿ??

ನ್ಯೂಸ್ ಆ್ಯರೋ : ಮೂರು ತಿಂಗಳ ಬಾಕಿ ವೇತನ ಪಾವತಿ, ಪ್ರತಿ ತಿಂಗಳು ವೇತನ ಬಿಡುಗಡೆ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ 108 ಆಂಬ್ಯುಲೆನ್ಸ್ ವಾಹನಗಳ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿರುವ ಕಾರಣ ನಾಳೆಯಿಂದ ರಾಜ್ಯದಾದ್ಯಂತ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ಸರ್ಕಾರದ ‘108-ಆರೋಗ್ಯ ಕವಚ’ ಯೋಜನೆ ನಿರ್ವಹಿಸುತ್ತಿರುವ ಜಿವಿಕೆ-ಇಎಂಆರ್ಐ ಸಂಸ್ಥೆಯಡಿ 2,500 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಈ ಸಂಸ್ಥೆಯು ಸೆಪ್ಟೆಂಬರ್ ಹಾಗೂ ಅಕ್ಟೋಬರ್ನ ವೇತನ ಪಾವತಿಸಿಲ್ಲ. ಗುರುವಾರ ಸಂಜೆಯೊಳಗೆ ವೇತನ ಪಾವತಿ ಆಗದಿದ್ದರೆ ಸೇವೆಗೆ ಗೈರುಹಾಜರಾಗಿ ಪ್ರತಿಭಟನೆ ನಡೆಸುವುದಾಗಿ 108 ಆಯಂಬುಲೆನ್ಸ್ ಸಿಬ್ಬಂದಿ ಎಚ್ಚರಿಕೆ ಕೊಟ್ಟಿದ್ದಾರೆ.
ಆರೋಗ್ಯ ಇಲಾಖೆಯು ಈಗಾಗಲೇ ಜಿವಿಕೆ ಸಂಸ್ಥೆಗೆ ಪತ್ರ ಬರೆದು, ವೇತನ ಪಾವತಿಸುವಂತೆ ಸೂಚಿಸಿದೆ. ವೇತನ ವಿಚಾರವಾಗಿ ಸಿಬ್ಬಂದಿಯು ಕಳೆದ ತಿಂಗಳೂ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರು. ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಜಿವಿಕೆ ಸಂಸ್ಥೆಯ ಪ್ರತಿನಿಧಿ ಹಾಗೂ ಸಿಬ್ಬಂದಿಯ ಜತೆಗೆ ಸಭೆ ನಡೆಸಿ ಬಾಕಿ ವೇತನ ನ.14ರೊಳಗೆ ಪಾವತಿಸುವಂತೆ ಸೂಚಿಸಿದ್ದರು. ಇದೀಗ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಆಯಂಬುಲೆನ್ಸ್ ಸಿಬ್ಬಂದಿ ಸರ್ಕಾರ ಹಾಗೂ ಜಿವಿಕೆ ಸಮಸ್ಥೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಕುರಿತು ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ‘ಸದ್ಯಕ್ಕೆ 108 ಆಂಬುಲೆನ್ಸ್ ಸಿಬ್ಬಂದಿಯ ಮನವೊಲಿಸಲು ಯತ್ನಿಸುತ್ತೇವೆ. ಡಿಸೆಂಬರ್ ಒಳಗೆ ಹೊಸ ಸೇವೆಯನ್ನು ಒದಗಿಸುತ್ತೇವೆ. ಬಾಕಿ ಇರುವ ವೇತನವನ್ನು ಸರ್ಕಾರ ಪಾವತಿಸುತ್ತದೆ. ಜಿವಿಕೆ ಸಂಸ್ಥೆಯಿಂದ ಸರ್ಕಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ಕಾನೂನು ಅಡ್ಡ ಇಟ್ಟುಕೊಂಡು ತೊಂದರೆ ಮಾಡಿದ್ದಾರೆ. ಅವರು ಹೆಸರು ಬದಲಾಯಿಸಿಕೊಂಡು ಬಂದರೂ ಅವಕಾಶ ನೀಡುವುದಿಲ್ಲ. ಹೊಸ ಟೆಂಡರ್ ನಲ್ಲಿ ಜಿವಿಕೆ ಸಂಸ್ಥೆಗೆ ಅವಕಾಶ ಕೊಡಲ್ಲ ಎಂದಿದ್ದಾರೆ.