ಪುತ್ತೂರು : ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪಕ – 3 ವರ್ಷ ಶಿಕ್ಷೆ, ದಂಡ ವಿಧಿಸಿದ ಜಿಲ್ಲಾ ನ್ಯಾಯಾಲಯ

ನ್ಯೂಸ್ ಆ್ಯರೋ : ಭೂಮಿ ಅಳತೆ ಮಾಡಿ ನಕ್ಷೆ ತಯಾರಿಸಿ ಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪುತ್ತೂರು ಭೂಮಾಪನ ಇಲಾಖೆಯ ಭೂಮಾಪಕ ಮಹಾದೇವ ನಾಯಕ್ನಿಗೆ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ಅದೇಶ ನೀಡಿದೆ.
8 ವರ್ಷಗಳ ಹಿಂದೆ 2014 ಮಾರ್ಚ್ 15 ರಂದು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಅಂಕಿತ ಎಂಬವರು ತನ್ನ ತಂದೆ ಕೃಷ್ಣಪ್ಪ ಅವರಿಗೆ ಸಂಬಂಧಿಸಿದ ಜಮೀನಿನನ್ನು ಅಳತೆ ಮಾಡಿ ನಕ್ಷೆ ತಯಾರಿಸಿ ಕೊಡುವಂತೆ ಪುತ್ತೂರು ಭೂಮಾಪನ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಜಮೀನಿನನ್ನು ಅಳತೆ ಮಾಡಿ ನಕ್ಷೆ ತಯಾರಿಸಿ ಕೊಡಲು ಭೂ ಮಾಪಕ ಮಹಾದೇವ ನಾಯಕ್ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಅಂಕಿತ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರು ಕಾರ್ಯತಂತ್ರ ರೂಪಿಸಿ ಮಹಾದೇವ ನಾಯಕ್ ನನ್ನು ತಮ್ಮ ಬಲೆಗೆ ಕೆಡವಿದ್ದರು.
ಬಳಿಕ ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಪ್ರಕರಣದ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸಿದ್ದು, ಆರೋಪಿ ಮಹಾದೇವ ನಾಯಕ್ನಿಗೆ 3 ವರ್ಷ 3 ತಿಂಗಳ ಸಾದಾ ಸಜೆ ಮತ್ತು 20,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸಲು ವಿಫಲವಾದರೆ ಮತ್ತೆ 3 ತಿಂಗಳ ಸಾದಾ ಸಜೆ ಅನುಭವಿಸ ಬೇಕೆಂದು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಎಸ್. ವಿಜಯ ಪ್ರಸಾದ್ ಆರೋಪಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಅವರು ವಾದ ಮಂಡಿಸಿದ್ದರು.