ನ್ಯೂಸ್ ಆ್ಯರೋ : ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಹಾಸನೂರು ಬಳಿ ಕಾಡಾನೆಗೆ ತಿನ್ನಲು ಕಬ್ಬು ನೀಡಿದ ಮೈಸೂರಿನ ಚಾಲಕನಿಗೆ ಅಲ್ಲಿನ ಪೊಲೀಸರು 75 ಸಾವಿರ ದಂಡ ಹಾಕಿರುವ ಘಟನೆ ಈಚೆಗೆ ನಡೆದಿದೆ.
ಕರೆಪಳ್ಳಂ ಚೆಕ್ಪೋಸ್ಟ್ನಿಂದ ಮೂರು ಕಿ.ಮೂ ದೂರದಲ್ಲಿ ಕಬ್ಬು ತುಂಬಿದ್ದ ಲಾರಿ ನಿಂತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಲಾರಿ ಚಾಲಕ ರಾಷ್ಟ್ರೀಯ ಹೆದ್ದಾರಿ ಬಳಿ ಇದ್ದ ಕಾಡಾನೆಗೆ ತಿನ್ನಲು ಕಬ್ಬು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿದ್ದಾರೆ. ಬಳಿಕ ವಿಚಾರಣೆ ವೇಳೆ ಆನೆಗೆ ಕಬ್ಬು ನೀಡಿದ್ದನ್ನು ಲಾರಿ ಚಾಲಕ ಒಪ್ಪಿಕೊಂಡಿದ್ದು, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ₹75 ಸಾವಿರ ದಂಡವನ್ನು ಹಾಕಿದ್ದಾರೆ.
ಹುಲಿ ಸಂರಕ್ಷಿತಾರಣ್ಯಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ವನ್ಯಜೀವಿಗಳಿಗೆ ಆಹಾರ ನೀಡುವುದಕ್ಕೆ ಅವಕಾಶ ಇಲ್ಲ. ಈಚೆಗೆ ಜಿಲ್ಲೆಯ ಗಡಿಭಾಗದ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಆನೆಗಳು ಕಬ್ಬಿನ ಲಾರಿಗಳನ್ನು ತಡೆದು ಕಬ್ಬು ತಿನ್ನುವುದು ಸರ್ವೇ ಸಾಮಾನ್ಯವಾಗಿದೆ.
ಇದರಿಂದ ಆನೆಗಳು ಕಬ್ಬು ತಿನ್ನುವ ಆಸೆಗೆ ಮಾರ್ಗಕ್ಕೆ ಬಂದು ಹೋಗುವ ಲಾರಿಗಳನ್ನು ತಡೆಯುತ್ತದೆ. ಇದು ಅಪಘಾತಕ್ಕೆ ಕಾರಣವಾಗಲಿದೆ. ಆದ್ದರಿಂದ ಕಾಡು ಪ್ರಾಣಿಗಳಿಗೆ ಆಹಾರವನ್ನು ನೀಡುವುದನ್ನು ಇಲಾಖೆ ನಿಷೇಧಿಸಿದೆ.