ಕುಂದಾಪುರ : ಪ್ರವೀಣ್ ನೆಟ್ಟಾರು ಕುಟುಂಬದಂತೆ ಕೊಲೆಯಾದ ಪರೇಶ್ ಮೇಸ್ತ, ರುದ್ರೇಶ್ ಕುಟುಂಬಕ್ಕೂ ಪರಿಹಾರ ನೀಡಿ – ಸರ್ಕಾರದ ವಿರುದ್ಧ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಗುಡುಗು

ನ್ಯೂಸ್ ಆ್ಯರೋ : ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಶ್ರೀರಾಮಸೇವೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಧರ್ಮಪತ್ನಿಗೆ ನೌಕರಿ ನೀಡುವ ಹೇಳಿಕೆಯನ್ನು ಸಿಎಂ ಪೂರ್ಣಗೊಳಿಸಿದ್ದು, ಈ ನಡೆಯನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.
ಕುಂದಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಕೆಲಸ ನೀಡುವ ಹೇಳಿಕೆಯನ್ನ ಅಧಿಕೃತವಾಗಿ ದೃಢಪಡಿಸಿದ್ದಾರೆ. ಈ ಬಗ್ಗೆ ಪ್ರವೀಣ್ ನೆಟ್ಟಾರು ಧರ್ಮಪತ್ನಿಯವರಿಗೆ ಪತ್ರ ಮುಖೇನ ಮಾಹಿತಿಯನ್ನು ನೀಡಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ, ಸರಕಾರಕ್ಕೆ ಅಭಿನಂದನೆಗಳನ್ನು ಹೇಳುತ್ತಿದ್ದೇನೆ ಎಂದರು.
ನೆಟ್ಟಾರು ಅವರ ಧರ್ಮಪತ್ನಿಗೆ ಸಮೀಪದಲ್ಲಿಯೇ ಪುತ್ತೂರಿನಲ್ಲಿ ಕೆಲಸ ನೀಡಿದರೆ ಉತ್ತಮ. ಅಲ್ಲದೆ ಸದ್ಯ ನೀಡಿರುವ ಉದ್ಯೋಗ ಗುತ್ತಿಗೆ ಆಧಾರದ ಮೇಲೆ ಇದೆ, ಇಲ್ಲಿ ಉದ್ಯೋಗ ಭದ್ರತೆ ಇಲ್ಲ. ಅವರಿಗೆ ಅಸುರಕ್ಷತೆ ಅಭದ್ರತೆ ಕಾಡದ ಹಾಗೆ ಖಾಯಂ ನೌಕರಿ ನೀಡುವ ಕೆಲಸವಾಗಬೇಕಿದೆ. ಈ ವಿಚಾರವಾಗಿ ನಾನು ಸರಕಾರಕ್ಕೆ ಒತ್ತಾಯ ಮಾಡುತ್ತೇನೆ ಹಾಗೂ ಆಗ್ರಹಿಸುತ್ತೇನೆ ಎಂದು ನುಡಿದಿದ್ದಾರೆ.
ಇದೇ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್, ಪರೇಶ್ ಮೇಸ್ತ ಪ್ರಕರಣ ಹಳ್ಳ ಹಿಡಿದ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರವೀಣ್ ನೆಟ್ಟಾರು ಪತ್ನಿಗೆ ಯಾವ ರೀತಿ ಕೂಡಲೇ ಒಂದು ಪರಿಹಾರವನ್ನು ಕೊಡುವ ಪ್ರಕ್ರಿಯೆಯನ್ನು ಮಾಡಿದ್ದೀರಿ. ಇತ್ತ ಪರೇಶ್ ಮೇಸ್ತ ಅಕ್ಕ ಇದ್ದು, ಅವರ ಮನೆಯ ಪರಿಸ್ಥಿತಿಯೂ ಬಹಳ ಗಂಭೀರವಾಗಿದೆ.
ಬೆಂಗಳೂರು ಹಿಂದೂ ಕಾರ್ಯಕರ್ತ ರುದ್ರೇಶ್ ಕೊಲೆಯಾಗಿದೆ, ಅವರ ಪತ್ನಿ ಮತ್ತು ಮಕ್ಕಳು ಕಷ್ಟದಲ್ಲಿದ್ದಾರೆ. ಹೀಗೆ ಕೊಲೆಯಾದ ಹಿಂದೂ ಕಾರ್ಯಕರ್ತರ ಮನೆಗಳ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ. ಇನ್ನು ಪರೇಶ್ ಮೇಸ್ತ ಪ್ರಕರಣವನ್ನು ಎನ್ ಐ ಎ ಕೈಗೆತ್ತಿಕೊಂಡಿದೆ, ಇದುವರೆಗೆ ಯಾವುದೇ ತನಿಖೆ ನಡೆದಿಲ್ಲ. ನಾನು ಇತ್ತೀಚಿಗೆ ಪರೇಶ್ ಮೇಸ್ತ ಮನೆಗೆ ತೆರಳಿದ್ದೇನೆ, ಎನ್ಐಎ ಅವರು ಸೌಜನ್ಯಕ್ಕೂ ಕೂಡ ತನಿಖೆ ಮಾಡಿಲ್ಲ ಎಂದು ನೊಂದು ನುಡಿದರು.
ಇಲ್ಲಿ ಎನ್ ಐ ಎ ಅವರ ನಿರ್ಲಕ್ಷವೋ, ಇಲ್ಲಾ ಸರಕಾರದ ಸೂಚನೆಯ ಮೇರೆಗೆ ಈ ರೀತಿ ನಡೆದುಕೊಳ್ಳುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಎನ್ ಐ ಎ ಎಂದಾಕ್ಷಣ ಏನೋ ಒಂದು ಗಂಭೀರ ಆಗುತ್ತದೆ ಎಂದು ತಿಳಿದವರಿಗೆ,ಇದು ಸುಳ್ಳು ಎನ್ನುವುದು ಪರೇಶ್ಮೇಸ್ತ ಪ್ರಕರಣದಲ್ಲಿ ಗೊತ್ತಾಗಿದೆ. ಯಾರೆಲ್ಲಾ ಹಿಂದೂ ಕಾರ್ಯಕರ್ತರು ಕೊಲೆಯಾಗಿದ್ದಾರೋ ಅವರ ಮನೆಯವರಿಗೆ ಆರ್ಥಿಕ ಸದೃಢತೆ ನೀಡಬೇಕು. ಇದು ಸಂಪೂರ್ಣವಾಗಿ ಸರಕಾರದ ಹೊಣೆ ಜವಾಬ್ದಾರಿ ಎಂದರು.
ಪ್ರವೀಣ್ ನೆಟ್ಟಾರು ವಿಚಾರದಲ್ಲಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ನೀವು ಪ್ರತಿಕ್ರಿಯಿಸಿದ್ದೀರಿ. ಪರೇಶ್ ಮೇಸ್ತ ಪ್ರಕರಣ ಆ ಸಮಯದಲ್ಲಿ ರಾಜ್ಯದಾದ್ಯಂತ ದೊಡ್ಡ ಹೋರಾಟಕ್ಕೆ ಕಾರಣವಾಗಿತ್ತು. ಅದಾದ ತಕ್ಷಣ ನಿರ್ಲಕ್ಷ್ಯವಾಗಿದೆ, ಅದು ಆಗಬಾರದು ಎನ್ನುವ ದೃಷ್ಟಿಕೋನದಿಂದ ಅಪರಾಧಿಗೆ ಶಿಕ್ಷೆಯಾಗುವ ಕ್ರಮ ಆಗಬೇಕು. ಆರ್ಥಿಕ ಸದೃಢತೆಯನ್ನು ನೀಡುವ ಕೆಲಸ ಸರ್ಕಾರದಿಂದ ಆಗಬೇಕು ಅವರ ಮನೆಯವರಿಗೆ ನೌಕರಿಯನ್ನು ನೀಡಬೇಕು ಎಂದು ಆಗ್ರಹಿಸಿದರು.