ಮೂಡಬಿದ್ರಿ : ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಲೈಂಗಿಕ ಕಿರುಕುಳ ನೀಡಿದ್ದ ವೃದ್ಧನ ಬಂಧನ, ಕಾರ್ ನಲ್ಲೇ ಲೈಂಗಿಕ ಕಿರುಕುಳ ಎಸಗಿದ್ದ ಪಾಪಿ…!!

ನ್ಯೂಸ್ ಆ್ಯರೋ : ಕಳೆದ ಬುಧವಾರದಂದು ಮೂಡಬಿದಿರೆಯ ಜೈನ್ ಪಿಯು ಕಾಲೇಜಿನ ಪ್ರಥಮ ಪಿಯು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೋಟೆಬಾಗಿಲು ನಿವಾಸಿ ಶ್ರೀಧರ ಪುರಾಣಿಕ್ (63) ಎಂದು ಗುರುತಿಸಲಾಗಿದ್ದು, ಆರೋಪಿಯ ವಿರುದ್ಧ ಪೊಕ್ಸೊ, ದಲಿತ ದೌರ್ಜನ್ಯ ಮತ್ತಿತರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ :
ಮೃತ 17 ರ ಹರೆಯದ ಬಾಲಕಿ ಕಾರ್ಕಳ ಬೈಲೂರು ನಿವಾಸಿಯಾಗಿದ್ದು ಪಡುಕೊಣಾಜೆ ಹೌದಾಲ್ ಗ್ರಾಮದಲ್ಲಿನ ತನ್ನ ಸಂಬಂಧಿಕರ ಮನೆಯಲ್ಲಿದ್ದು ಕಾಲೇಜಿಗೆ ಹೋಗಿ ಬರುತ್ತಿದ್ದಳು. ಮಂಗಳವಾರ ಬಾಲಕಿಗೆ ಕಿವಿ ನೋವು ಕಾಣಿಸಿಕೊಂಡಿದ್ದು ಮನೆಗೆ ಹೋಗುತ್ತೇನೆ ಎಂದಿದ್ದಳು.
ಕಾಲೇಜಿನವರು ಮನೆಯವರಿಗೆ ವಿಷಯ ತಿಳಿಸಿದ್ದು ಅವರು ಪರಿಚಯದ ಅದೇ ಕಾಲೇಜಿನಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಶ್ರೀಧರ್ ಪುರಾಣಿಕ್ ಎಂಬಾತನ ಜತೆ ಮನೆಗೆ ಕಳುಹಿಸಿಕೊಡುವಂತೆ ಹೇಳಿದ್ದರು. ಶ್ರೀಧರ್ ಕಾಲೇಜಿಗೆ ಹೋಗಿ ಬಾಲಕಿಯನ್ನು ಮನೆಗೆ ಕರೆತರುವ ದಾರಿಯಲ್ಲಿ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದ್ದ. ಮನೆ ಹತ್ತಿರ ಬಂದರೂ ಆಕೆಯನ್ನು ಕಾರಿನಿಂದ ಇಳಿಯಲು ಬಿಡದೇ ಕಿರುಕುಳ ಮುಂದುವರಿಸಿದ್ದು ಇದರಿಂದ ಆಘಾತಕ್ಕೊಳಗಾಗಿದ್ದಳು. ನಡೆದ ವಿಷಯವನ್ನು ಆಕೆ ಮನೆಯಲ್ಲಿ ತಿಳಿಸಿರಲಿಲ್ಲ.
ಅಲ್ಲದೇ ನೊಂದ ಬಾಲಕಿ ಕಳೆದ ಬುಧವಾರ ಬೆಳಗ್ಗೆ ಮನೆ ಹತ್ತಿರದ ಹಾಡಿಯಲ್ಲಿ ಚೂಡಿದಾರದ ಶಾಲನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೂ ಮುನ್ನ ಬಾಲಕಿ ಡೆತ್ ನೋಟ್ ಬರೆದಿದ್ದು ಅದರಲ್ಲಿ ಶ್ರೀಧರನ ಹೆಸರು ಬರೆದು ತನಗೆ ಲೈಂಗಿಕ ಕಿರುಕುಳವಾಗಿರುವುದನ್ನು ಉಲ್ಲೇಖಿಸಿದ್ದಳು.
ಮೃತ ಬಾಲಕಿಯ ಚಿಕ್ಕಮ್ಮ ಆರೋಪಿ ಶ್ರೀಧರ್ ಪುರಾಣಿಕ್ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇದೇ ಪರಿಚಯದಲ್ಲಿ ಆರೋಪಿ ವಿದ್ಯಾರ್ಥಿನಿಯನ್ನು ಮನೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಅಲ್ಲದೇ ಬಾಲಕಿಯ ಫೀಸ್ ಕೂಡ ಆರೋಪಿಯೇ ಕಟ್ಟಿದ್ದ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ಪಣಂಬೂರು ಎಸಿಪಿ ಮಹೇಶ್ ಕುಮಾರ್ ಅವರು ವಹಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.