ಬೈಕಂಪಾಡಿಯ ಕಂಪನಿಯೊಂದರ ನೌಕರನಿಂದಲೇ ಧೋಖಾಬಾಜಿ, ಕೋಟಿ ಮೌಲ್ಯದ ಸೊತ್ತುಗಳ ಕಳವು – ಕದ್ದ ಮಾಲು ಮಾರಿ ಐಷಾರಾಮಿ ಜೀವನ, ಸಾಥ್ ನೀಡಿದ್ದ ಮೂವರು ಸೇರಿ ನಾಲ್ವರ ಬಂಧನ..!!

ನ್ಯೂಸ್ ಆ್ಯರೋ : ಮಂಗಳೂರು ನಗರದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ Bright Packaging Pvt. Ltd ಕಂಪೆನಿಗೆ ಗುಜರಾತ್ ನಿಂದ ಬರುತ್ತಿದ್ದ ಕೋಟ್ಯಾಂತರ ಪ್ಲಾಸ್ಟಿಕ್ ಕಚ್ಛಾ ಸಾಮಾಗ್ರಿಗಳನ್ನು ಕಳವು ಮಾಡಿ ಮಾರಾಟ ಮಾಡಿ ಕಂಪೆನಿಗೆ ಮೋಸ ಮಾಡಿದ ಕಂಪೆನಿಯ ನೌಕರ ಹಾಗೂ ಇತರ ಮೂರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಪಣಂಬೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಪ್ರಕರಣದ ವಿವರ
ಬೈಕಂಪಾಡಿಯ ಬ್ರೈಟ್ ಪ್ಯಾಕೆಜಿಂಗ್ ಪ್ರೈ.ಲಿ. ಎಂಬ ಕಂಪೆನಿಯಲ್ಲಿ Polypropylene Woven Sacks ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಇದಕ್ಕೆ ಬೇಕಾದ Polypropylene ಕಚ್ಚಾ ಸರಕುಗಳನ್ನು ಕಂಪನಿಗೆ ತರಿಸುತ್ತಿದ್ದು, ಕಂಪನಿಗೆ ಲಾರಿಯಲ್ಲಿ ಬರುತ್ತಿದ್ದ Polypropylene ಕಚ್ಚಾ ಸರಕುಗಳನ್ನು ಕಂಪನಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಲಾಲ್ ಎಂಬಾತ ಕಂಪನಿಗೆ ಬಂದ Polypropylene ಕಚ್ಚಾ ಸರಕುಗಳನ್ನು ಕಂಪನಿಯಲ್ಲಿ ಸ್ವೀಕೃತಿಗೊಂಡಂತೆ ಪೋರ್ಜರಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಕಂಪನಿಗೆ ತಿಳಿಯದಂತೆ ಇತರೊಂದಿಗೆ ಸೇರಿಕೊಂಡು 2019 ನೇ ಡಿಸೆಂಬರ್ ತಿಂಗಳಿನಿಂದ 2022 ಜನವರಿ ತಿಂಗಳ ವರೆಗೆ ಕೋಟ್ಯಾಂತರ ಮೌಲ್ಯದ 36 ಟ್ರಕ್ ಗಳಲ್ಲಿ ಬಂದ Polypropylene ಕಚ್ಚಾ ಸರಕುಗಳನ್ನು ಕಂಪನಿಗೆ ತಿಳಿಯದಂತೆ ಕಳವು ಮಾಡಿದ್ದ.
ಕಳವು ಮಾಡಿದ ಕಚ್ಚಾ ಸರಕುಗಳನ್ನು ಮಹೇಶ್ ಕುಲಾಲ್ ನ ಸ್ನೇಹಿತನಾದ ಅನಂತ ಸಾಗರ್ ಎಂಬಾತನಿಗೆ ನೀಡಿದ್ದು, ಅನಂತ ಸಾಗರ್ ಈ ಕಚ್ಚಾ ಸರಕುಗಳನ್ನು ಅನಂತ ಸಾಗರ್ ಕೆಲಸ ಮಾಡುವ ಬೈಕಂಪಾಡಿಯ ವಿಧಿ ಎಂಟರ್ ಪ್ರೈಸಸ್ ನ ಹೆಸರಿನಲ್ಲಿ ನಕಲಿ ಬಿಲ್ಲುಗಳನ್ನು ಮಾಡಿ ಅದನ್ನು ಬೆಂಗಳೂರಿನ ಹೆಚ್ ಎಸ್ ಪಾಲಿಮಾರ್ ನ ಆರೋಪಿ ಕಿರಣ್ ಸಾಮಾನಿ ಎಂಬಾತನಿಗೆ ಮಾರಾಟ ಮಾಡಿದ್ದ. ಆರೋಪಿಗಳು ಕೋಟಿ ಮೌಲ್ಯದ 36 ಲೋಡ್ ಸುಮಾರು 840 ಟನ್ Polypropylene ಕಚ್ಚಾ ಸರಕುಗಳನ್ನು ಕಂಪನಿಗೆ ಗೊತ್ತಿಲ್ಲದೆ ಕಳವು ಮಾಡಿ ಅದನ್ನು ಮಾರಾಟ ಮಾಡಿದ್ದಾರೆಂದು ಅಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಪಣಂಬೂರು ಠಾಣಾ ಇನ್ಸ್ ಪೆಕ್ಟರ್ ಸೋಮಶೇಖರ ರವರ ನೇತೃತ್ವದ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ 1. ಮಹೇಶ್ ಕುಲಾಲ್ @ ಮಹೇಶ್ ರಘು ಕುಲಾಲ್,(38), , ವಾಸ: ಸುಬ್ರಹ್ಮಣ್ಯ ದೇವಸ್ಥಾನದ ಬಳಿ, ಕಡಂದಲೆ ಗ್ರಾಮ, ಮಂಗಳೂರು. ಹಾಲಿ ವಾಸ: ಫ್ಲಾಟ್ ನಂಬ್ರ: 101, ಗಗನ್ ದೀಪ್ ಆಪಾರ್ಟ್ ಮೆಂಟ್, ಬಿಜೈ ಕಾಪಿಕಾಡ್, ಮಂಗಳೂರು, 2. ಅನಂತ ಸಾಗರ(39), ವಾಸ: ಓಂ ವಿಲಾಸ, ಕ್ಯಾಸಲಿನ ಕಾಲೊನಿ ರೋಡ್, ಶಕ್ತಿನಗರ, ಮಂಗಳೂರು, 3. ಸಾಯಿ ಪ್ರಸಾದ್ (35), ವಾಸ; ನಂ: 3-45, ಪಟ್ಣ ಹೌಸ್, ಕಡಂದಲೆ ಪೋಸ್ಟ್ ಮತ್ತು ಗ್ರಾಮ, ಮಂಗಳೂರು ಮತ್ತು 4. ಕಿರಣ್ ಸಮಾನಿ(53), ವಾಸ:#49, 4ನೇಕ್ರಾಸ್ ಸ್ಟ್ರೀಟ್, 1ನೇ ಮಹಡಿ, ಎಂ.ಕೆ.ಬಿ. ನಗರ, ಚೆನೈ ತಮಿಳುನಾಡು ಎಂಬವರನ್ನು ಬಂಧಿಸಿದ್ದಾರೆ.
ಆರೋಪಿ ಮಹೇಶ್ ಕುಲಾಲ್ ಎಂಬಾತ ಬ್ರೈಟ್ ಕಂಪನಿಯಿಂದ Polypropylene ಕಚ್ಚಾ ಸರಕುಗಳನ್ನು ಕಳವು ಮಾಡಿ ಮಾರಾಟ ಮಾಡಿದ ಹಣದಲ್ಲಿ ಮಂಗಳೂರಿನ ವಿವಿಧ ಕಡೆಗಳಲ್ಲಿ ಜಮೀನು ಖರೀದಿ ಮಾಡಿದ್ದು, ಅಲ್ಲದೇ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿ ಐಶಾರಾಮಿ ಜೀವನ ನಡೆಸುತ್ತಿದ್ದ. ಅಲ್ಲದೇ ತನ್ನ ಪತ್ನಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಹಣ ಠೇವಣಿ ಇರಿಸಿ, ಇನ್ಸೂರೆನ್ಸ್, Share market ನಲ್ಲಿ ಹೂಡಿಕೆ ಮಾಡಿದ್ದ. ಅಲ್ಲದೇ ಪತ್ನಿಯ ಹೆಸರಿನಲ್ಲಿ ನಗರದ 3 ಕಡೆಗಳಲ್ಲಿ ಐಷಾರಾಮಿ ಸೆಲೂನ್ ಗಳನ್ನು ಹೊಂದಿದ್ದಾನೆಂದು ತಿಳಿದು ಬಂದಿದೆ.
ಅನಂತ ಸಾಗರ್ ಎಂಬಾತ ಐಷಾರಾಮಿ ಮನೆಯನ್ನು ಕಟ್ಟಿಸಿ ಐಷಾರಾಮಿ ಕಾರನ್ನು ಖರೀದಿ ಮಾಡಿ ಐಶಾರಾಮಿ ಜೀವನ ಸಾಗಿಸುತ್ತಿದ್ದ. ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಬಂಧಿತರಿಂದ ಮೊಬೈಲ್ ಪೋನ್ ಗಳು -6, ಲ್ಯಾಪ್ ಟಾಪ್ ಗಳು-4, ಕಂಪ್ಯೂಟರ್-1, ಮಹೇಶ್ ಕುಲಾಲ್ ನ ಹುಂಡೈ ಕಂಪೆನಿಯ ALCAZAR ಕಾರು-1. ರೆನಾಲ್ಡ್ ಕಾರು -1, ಅನಂತ ಸಾಗರ್ ನಿಂದ ಕಿಯಾ ಕಂಪನಿಯ Seltos ಕಾರು-1, ಟಾಟಾ ಕಂಪೆನಿಯ ಲಾರಿಯೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 74 ಲಕ್ಷ ಆಗಬಹುದು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.