ಕೊನೆಗೂ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದು – ದಶಕಗಳ ನಿರೀಕ್ಷೆ, ಹೋರಾಟಕ್ಕೆ ಸಿಕ್ತು ಪ್ರತಿಫಲ

ನ್ಯೂಸ್ ಆ್ಯರೋ : ಕೊನೆಗೂ ಕರಾವಳಿಗರ ಬಹುಕಾಲದ ಹೋರಾಟಕ್ಕೆ ಮುಕ್ತಿ ಸಿಕ್ಕಿದೆ. ಸರ್ವ ನಾಗರಿಕರ ಹೋರಾಟಕ್ಕೆ ಫಲ ಸಿಕ್ಕಿದ್ದು, ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ನಳಿನ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸುರತ್ಕಲ್ ಟೋಲ್ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಅಲ್ಲದೇ ಟೋಲ್ ವಿರೋಧಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತ್ತು. ಇದರಿಂದ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೀಡಾಗಿತ್ತು.
ವಿವಾದ ಏಕೆ ?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಅರವತ್ತು ಕಿಲೋ ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಲೇಬಾರದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕೇವಲ 48 ಕಿಲೋ ಮೀಟರ್ ಅಂತರದಲ್ಲಿ ನಾಲ್ಕು ಟೋಲ್ ಗೇಟ್ಗಳಿವೆ. ಅದರಲ್ಲೂ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಸುರತ್ಕಲ್ ಟೋಲ್ಗೇಟ್ನ್ನು ಕಾಲಾಂತರದಲ್ಲಿ ಶಾಶ್ವತ ಮಾಡಲಾಗಿದೆ. ಹೀಗಾಗಿ ಈ ಟೋಲ್ಗೇಟ್ ರದ್ದು ಮಾಡಬೇಕು ಎಂದು ಕಳೆದ ಅನೇಕ ವರ್ಷಗಳಿಂದ ಟೋಲ್ ವಿರೋಧಿ ಸಮಿತಿ ಆಗ್ರಹಿಸುತ್ತಲೇ ಬಂದಿತ್ತು. ಇದರ ಬೆನ್ನಲ್ಲೇ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ಸಾರ್ವಜನಿಕ ವಲಯದಲ್ಲಿ ಸಂಭ್ರಮಾಚರಣೆ ಕಂಡುಬರುತ್ತಿದೆ.