ಮಂಗಳೂರು : ಕೇವಲ 300 ರೂಪಾಯಿಗೆ ಲೈಂಗಿಕ ಸಂಪರ್ಕಕ್ಕೆಂದು ಕರೆದೊಯ್ದ ಸಲಿಂಗಕಾಮಿ – ಹಣ ಕೊಡದೆ ವೇಷ ಹಾಕುವವನನ್ನು ಕೊಂದೇ ಹಾಕಿದ ಆರೋಪಿಯ ಬಂಧನ

ನ್ಯೂಸ್ ಆ್ಯರೋ : ಮಂಗಳೂರು ನಗರ ಕಮೀಷನರೇಟ್ ನ ಕಾವೂರು ಪೋಲಿಸ್ ಠಾಣಾ ವ್ಯಾಪ್ತಿಯ ಹರಿಪದವು ಬಳಿ ಹುಲಿವೇಷಧಾರಿ ಜಯಾನಂದ ಆಚಾರ್ಯ (65) ಎಂಬವರು ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದ ಪ್ರಕರಣವನ್ನು ಪೋಲಿಸರು ಭೇದಿಸಿದ್ದು, ಸಲಿಂಗಕಾಮಿ ಯುವಕನೊಬ್ಬ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಹತ್ಯೆ ಮಾಡಿರುವ ವಿಚಾರ ಬಯಲಾಗಿದೆ.
ಕುಂಜತ್ ಬೈಲ್ ದೇವಿನಗರದ ರಾಜೇಶ್ ಪೂಜಾರಿ (21) ಕೊಲೆ ಆರೋಪಿಯಾಗಿದ್ದು, ಕಾವೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಿಯೋನಿಕ್ಸ್ ನ ಖಾಲಿ ಜಾಗವಿರುವ ಹರಿಪದವು ಎಂಬಲ್ಲಿ ಘಟನೆ ನಡೆದಿದ್ದು, ಹುಲಿವೇಷಧಾರಿಯಾಗಿದ್ದ ಜಯಾನಂದ ಆಚಾರ್ಯರ ಮೃತದೇಹ ಕುತ್ತಿಗೆಗೆ ದಾರ ಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿತ್ತು. ಈ ಬಗ್ಗೆ ಜಯಾನಂದರ ಸಹೋದರ ಅಚ್ಚುತ ಆಚಾರ್ಯ ಎಂಬವರು ಕೊಲೆ ಶಂಕೆ ವ್ಯಕ್ತಪಡಿಸಿ ಕಾವೂರು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಕಾವೂರು ಪೊಲೀಸರು ತನಿಖೆ ನಡೆಸಿದ್ದು, ರಾಜೇಶ್ ಪೂಜಾರಿ ಎಂಬಾತ ಕೊಲೆ ನಡೆಸಿರುವುದಾಗಿ ತಿಳಿದುಬಂದಿದ್ದು, ಅದರಂತೆ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನೂ ಘಟನೆ ಕುರಿತು ನಗರದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೊಲೆಯ ಹಿಂದಿನ ಕಾರಣವನ್ನು ತಿಳಿಸಿದ್ದಾರೆ. ಆರೋಪಿಯು ಮೃತ ವ್ಯಕ್ತಿಯನ್ನು ಲಾಲ್ ಭಾಗ್ ಪ್ರದೇಶದಿಂದ 300 ರೂ.ಗೆ ಲೈಂಗಿಕವಾಗಿ ಬಳಸಿಕೊಳ್ಳಲು ಕರೆದೊಯ್ದಿದಿದ್ದು, ಬಳಿಕ ಆರೋಪಿಯು ಅಪರಾಧ ಸ್ಥಳದಲ್ಲಿ ಹಣ ನೀಡಲು ನಿರಾಕರಿಸಿದ್ದಾನೆ. ಈ ಸಂದರ್ಭ ಆರೋಪಿಯು ಜಯಾನಂದ ಆಚಾರ್ಯನನ್ನು ಕೊಲೆಗೈದಿದ್ದಾನೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಐಪಿಸಿ 302 ಹಾಗೂ 377 ಸೆಕ್ಷನ್ ಅಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.