1. Home
  2. Mangaluru
  3. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ಹಿಂಬಾಲಿಸಿ ಕೊಲೆ ಬೆದರಿಕೆ – ಮಾರಕಾಯುಧ ಝಳಪಿಸಿ ಅವಾಚ್ಯ ಶಬ್ದಗಳಿಂದ ನಿಂದನೆ, ಅಪರಿಚಿತನ ಪತ್ತೆಗೆ ಇಳಿದ ಪೋಲಿಸರು..+!

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ಹಿಂಬಾಲಿಸಿ ಕೊಲೆ ಬೆದರಿಕೆ – ಮಾರಕಾಯುಧ ಝಳಪಿಸಿ ಅವಾಚ್ಯ ಶಬ್ದಗಳಿಂದ ನಿಂದನೆ, ಅಪರಿಚಿತನ ಪತ್ತೆಗೆ ಇಳಿದ ಪೋಲಿಸರು..+!

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ಹಿಂಬಾಲಿಸಿ ಕೊಲೆ ಬೆದರಿಕೆ – ಮಾರಕಾಯುಧ ಝಳಪಿಸಿ ಅವಾಚ್ಯ ಶಬ್ದಗಳಿಂದ ನಿಂದನೆ, ಅಪರಿಚಿತನ ಪತ್ತೆಗೆ ಇಳಿದ ಪೋಲಿಸರು..+!
0

ನ್ಯೂಸ್ ಆ್ಯರೋ : ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಅಪರಿಚಿತ ಸ್ಕಾರ್ಪಿಯೋ ಕಾರ್ ನಲ್ಲಿ ಬಂದ ಅಪರಿಚಿತನೊಬ್ಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿ ಪೇಟೆ ಎಂಬಲ್ಲಿ ಅಕ್ಟೋಬರ್ 13 ರಂದು ತಡ ರಾತ್ರಿ ನಡೆದಿದ್ದು, ಹರೀಶ್‌ ಪೂಂಜಾರವರ ಕಾರು ಚಾಲಕ ನವೀನ್ ನೀಡಿದ ದೂರಿನಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಸಂಜೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಹರೀಶ್ ಪೂಂಜಾರವರು ಬೆಳ್ತಂಗಡಿಗೆ ಕಾರಿನಲ್ಲಿ ಹಿಂತಿರುಗಿ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಮೊದಲು ಶಾಸಕರ ಕಾರನ್ನು ದುಷ್ಕರ್ಮಿಯು ಬಿಳಿ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದಾನೆ. ಶಾಸಕರಿದ್ದ ಕಾರು ಫರಂಗಿ ಪೇಟೆಯ ಮೀನು ಮಾರುಕಟ್ಟೆ ಬಳಿ ತಲುಪುತ್ತಲೇ, ದುಷ್ಕರ್ಮಿ ತನ್ನ ಕಾರನ್ನು ಅದಕ್ಕೆ ಅಡ್ಡ ನಿಲ್ಲಿಸಿ ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ಧಗಳಿಂದ ಬೈದು ತನ್ನ ಕೈಯಲಿದ್ದ ಆಯುಧವನ್ನು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

ಅ.12 ರಂದು ಶಾಸಕ ಹರೀಶ್‌ ಪೂಂಜಾರವರು ಬೆಂಗಳೂರಿಗೆ ಹೋಗಿದ್ದು ಅಕ್ಟೋಬರ್ 13 ರಂದು ಸಂಜೆ 7 ಗಂಟೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅವರ ಬರುವಿಕೆಯ ಮಾಹಿತಿ ಇದ್ದ ಅವರ ಕಾರು ಚಾಲಕ ನವೀನ್‌ ಎಂಬವರು ಶಾಸಕರನ್ನು ಕರೆ ತರಲು ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ.

ಅಲ್ಲಿಂದ ನವೀನ್‌ ಅವರು ಶಾಸಕರನ್ನು ಮಂಗಳೂರಿನ ಸರ್ಕ್ಯೂಟ್‌ ಹೌಸ್‌ ಗೆ ಕರೆ ತಂದು ಬಿಟ್ಟಿದ್ದು ಅಲ್ಲಿ ಅವರು ಮೀಟಿಂಗ್‌ ಒಂದರಲ್ಲಿ ಭಾಗವಹಿಸಿದ್ದಾರೆ. ರಾತ್ರಿ ಸುಮಾರು 10.40ರ ವೇಳೆಗೆ ಮೀಟಿಂಗ್‌ ಮುಗಿಸಿ ಶಾಸಕ ಪೂಂಜಾರವರು ಅಲ್ಲಿಗೆ ಆಗಮಿಸಿದ್ದ ಸಂಬಂದಿಕರಾದ ಪ್ರಶಾಂತ್ ಮತ್ತು ಕುಶಿತ್ ರವರ ಕಾರಿನಲ್ಲಿ ತೆರಳಿದ್ದಾರೆ. ಹೀಗಾಗಿ ನವೀನ್‌ ಅವರು ಒಬ್ಬರೇ ಕಾರಿನಲ್ಲಿ ಹಿಂದಿನಿಂದ ತೆರಳಿದ್ದಾರೆ.

ಶಾಸಕರು ಕಾರಿನಲ್ಲಿ ನಂತೂರು, ಪಡೀಲ್ ಮಾರ್ಗವಾಗಿ ತೆರಳಿದ್ದು, ನಾಗುರಿ ರೈಲ್ವೇ ಓವರ್ ಬ್ರಿಡ್ಜ್ ಬಳಿ ಬರುತ್ತಲೇ ಸ್ಥಾರ್ಪಿಯೋ ಕಾರೊಂದು ಅವರ ಕಾರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿದೆ. ಇದನ್ನು ಗಮನಿಸಿದ ನವೀನ್‌ ಅವರು ವಿಚಾರವನ್ನು ಪೂಂಜಾರವರಿಗೆ ಫೋನ್‌ ಮಾಡಿ ತಿಳಿಸಿದ್ದಾರೆ. ಈ ವೇಳೆ ಪೂಂಜಾರವರು ಸ್ಕಾರ್ಪಿಯೋ ಕಾರನ್ನು ಹಿಂಬಾಲಿಸಿಕೊಂಡು ಬರುವಂತೆ ತಿಳಿಸಿದ್ದಾರೆ.

ರಾತ್ರಿ 11.15 ರ ಸುಮಾರಿಗೆ ಶಾಸಕರಿದ್ದ ಕಾರು ಫರಂಗಿಪೇಟೆ ಮೀನು ಮಾರ್ಕೆಟ್ ನ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಸ್ಕಾರ್ಪಿಯೋ ಕಾರಿನಲ್ಲಿದ್ದ ದುಷ್ಕರ್ಮಿ ಅಡ್ಡಗಟ್ಟಿದ್ದಾನೆ. ಬಳಿಕ ಆತ ಕಾರಿನಲ್ಲಿದ್ದ ಶಾಸಕ ಪೂಂಜಾ ಅವರ ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದಿದ್ದಲ್ಲದೇ ತನ್ನ ಕೈಯ್ಯಲಿದ್ದ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ.

ಹೀಗಾಗಿ ಚಾಲಕ ರಕ್ಷಣೆಗೆ ಶಾಶಕ ಪೂಂಜಾರಿದ್ದ ಕಾರನ್ನು ಫರಂಗಿಪೇಟೆ ಹೊರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹೊರ ಠಾಣೆ ಮುಂಭಾಗ ಕಾರನ್ನು ನಿಲ್ಲಿಸುತ್ತಲೇ ಸ್ಕಾರ್ಪಿಯೋ ಕಾರು ಬಿಸಿರೋಡ್‌ ನತ್ತ ಪರಾರಿಯಾಗಿದೆ. ಸದ್ಯ ಈ ಸುದ್ದಿ ಭಾರೀ ಚರ್ಚೆಗೀಡಾಗಿದ್ದು, ಆಡಳಿತ ಸರ್ಕಾರದ ಶಾಸಕನ ಮೇಲೆಯೇ ಕೊಲೆಗೆ ಸ್ಕೆಚ್ ಹಾಕಿರುವ ಅಪರಿಚಿತನ ಪತ್ತೆಗೆ ಪೋಲಿಸರು‌ ಬಲೆ ಬೀಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..