Mangalore : ಅಕ್ರಮ ಕಸಾಯಿಖಾನೆಗಳ ವಿರುದ್ಧ ಯೋಗಿ ಮಾಡೆಲ್ – ಶಾಸಕ ಭರತ್ ಶೆಟ್ಟಿ ಸೂಚನೆ, ಮೂವರು ಗೋಕಳ್ಳರ ಆಸ್ತಿ ಮುಟ್ಟುಗೋಲಿಗೆ ಜಿಲ್ಲಾಡಳಿತ ಆದೇಶ

ನ್ಯೂಸ್ ಆ್ಯರೋ : ಕಸಾಯಿಖಾನೆ ವಿರುದ್ಧ ಯೋಗಿ ಮಾಡೆಲ್ ನಲ್ಲಿ ಕ್ರಮಕ್ಕೆ ಮುಂದಾಗಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ ಮೂರು ಕಡೆ ದಾಳಿ ನಡೆಸಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಮಂಗಳೂರು ಉತ್ತರ ಕ್ಷೇತ್ರದ ಮೂರು ಕಡೆಗಳಲ್ಲಿ ಆಸ್ತಿ ಮುಟ್ಟುಗೋಲು ಹಾಕಲಾಗಿದೆ.

ಗಂಜಿಮಠದ ಯೂಸೂಫ್, ಅರ್ಕುಳದ ಬಾತೀಶ್ ಮತ್ತು ಕಾಟಿಪಳ್ಳದ ಹಕೀಂ ಅವರ ಆಸ್ತಿಯನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 8 (4) ಅಡಿಯಲ್ಲಿ ಮುಟ್ಟುಗೋಲು ಹಾಕಲಾಗಿದೆ.
ಶಾಸಕ ಭರತ್ ಶೆಟ್ಟಿ ಸೂಚನೆಯಂತೆ ಸಹಾಯಕ ಆಯುಕ್ತ ಮದನ್ ಮೋಹನ್ ಆದೇಶ ಮಾಡಿದ್ದಾರೆ. ಪೊಲೀಸ್ ಠಾಣೆಗಳ ವರದಿ ಪಡೆದು ವಿಚಾರಣೆ ನಡೆಸಿ ಕಾಯ್ದೆ ಪ್ರಕಾರ ಮುಟ್ಟುಗೋಲು ಹಾಕಲಾಗಿದೆ. ಜಾಗ ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ಕಂದಾಯ ಇಲಾಖೆಯಿಂದ ಮುಟ್ಟುಗೋಲು ಹಾಕಲಾಗಿದೆ. ಕಾಯ್ದೆ ಜಾರಿ ಬೆನ್ನಲ್ಲೇ ಪರಿಣಾಮಕಾರಿ ಅನುಷ್ಠಾನಕ್ಕೆ ಶಾಸಕ ಭರತ್ ಶೆಟ್ಟಿ ಸೂಚಿಸಿದ್ದರು.
ಶಾಸಕರ ಸೂಚನೆ ಬೆನ್ನಲ್ಲೇ ಫೀಲ್ಡಿಗಿಳಿದಿದ್ದ ಪೊಲೀಸರು, ಮಂಗಳೂರು ಉತ್ತರ ಕ್ಷೇತ್ರದ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ನಡೆಸಿ ಜಾಗ ಮತ್ತು ವಸ್ತುಗಳನ್ನು ವಶಕ್ಕೆ ಪಡೆದು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ವರದಿ ಪಡೆದು ಜಾಗದ ಮಾಲೀಕರಿಗೆ ನೋಟೀಸ್ ನೀಡಿ ಆಸ್ತಿ ಮುಟ್ಟುಗೋಲು ಹಾಕಲಾಗಿದೆ.
ಗಂಜಿಮಠದ ಯೂಸೂಫ್, ಅರ್ಕುಳದ ಬಾತೀಶ್, ಕಾಟಿಪಳ್ಳದ ಹಕೀಂ ಜಾಗ ಮುಟ್ಟುಗೋಲು ಹಾಕಲಾಗಿದ್ದು, ಬಜಪೆ, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಕ್ರಮ ಕಸಾಯಿಖಾನೆಗಳು ಇದ್ದವು. ಕಾನೂನು ಪ್ರಕಾರ ಕಾಯ್ದೆ ಜಾರಿ ಮಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಅಸ್ತ್ರ ಪ್ರಯೋಗ ಮಾಡಲಾಗಿದೆ.
ಅಲ್ಲದೇ ಸರ್ಕಾರ ಮುಟ್ಟುಗೋಲು ಹಾಕಿಕೊಂಡ ಜಾಗವನ್ನು ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ಬಳಸದಂತೆ ಅಕ್ರಮ ದಂಧೆಗೆ ಅವಕಾಶ ನೀಡಿದವರಿಗೆ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಎಚ್ಚರಿಕೆ ನೀಡಿದ್ದಾರೆ.