ಉತ್ತರಾಖಂಡದಲ್ಲಿ ಹಿಮಪಾತ – ಮತ್ತೆ ಏಳು ಮೃತದೇಹ ಪತ್ತೆ, ಸಾವಿನ ಸಂಖ್ಯೆ 22ಕ್ಕೆ ಏರಿಕೆ

ನ್ಯೂಸ್ ಆ್ಯರೋ : ಪರ್ವತಾರೋಹಣ ತರಬೇತುದಾರರು ಮತ್ತು ಬೋಧಕರ 41 ಸದಸ್ಯರ ತಂಡಕ್ಕೆ ಹಿಮಪಾತವು ಅಪ್ಪಳಿಸಿ 3 ದಿನಗಳಾಗಿದ್ದು, ಉತ್ತರಾಖಂಡ್ ನ ಉತ್ತರಕಾಶಿ ಬಳಿ ಮತ್ತೆ 7 ಮೃತದೇಹಗಳು ಪತ್ತೆಯಾಗಿವೆ.

ಉತ್ತರಕಾಶಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಗುರುವಾರ 15 ಶವಗಳನ್ನು ಹೊರತೆಗೆಯಲಾಗಿತ್ತು. ಇದುವರೆಗೆ 12 ಮಂದಿಯನ್ನು ರಕ್ಷಿಸಲಾಗಿದೆ. ಈ ದುರಂತದಲ್ಲಿ ಇನ್ನೂ 7 ಜನರು ನಾಪತ್ತೆಯಾಗಿದ್ದಾರೆ. ದುರಂತ ನಡೆದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಎನ್ಐಎಂ ಹೇಳಿಕೆ ತಿಳಿಸಿದೆ.
ಈ ವರ್ಷದ ಆರಂಭದಲ್ಲಿ 16 ದಿನಗಳಲ್ಲಿ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಮಕಾಲು ಏರುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಏಸ್ ಪರ್ವತಾರೋಹಿ ಸವಿತಾ ಕಾನ್ಸ್ವಾಲ್ (26) ಸೇರಿದಂತೆ ನಾಲ್ವರ ಮೃತದೇಹಗಳು ಮಂಗಳವಾರ ಸಿಕ್ಕಿದ್ದವು.

ಸವಿತಾ ಕಾನ್ಸ್ವಾಲ್, ಮತ್ತೊಬ್ಬ ಬೋಧಕ ನೌಮಿ, ಪ್ರಶಿಕ್ಷಣಾರ್ಥಿಗಳಾದ ಶಿವಂ ಕೈಂತಲ (ಶಿಮ್ಲಾ) ಮತ್ತು ಅಜಯ್ ಬಿಶ್ತ್ (ಅಲ್ಮೋರಾ) ಅವರ ದೇಹಗಳನ್ನು ಎನ್ಐಎಂನ ಮೂಲ ಶಿಬಿರದಿಂದ (13,600 ಅಡಿ) ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್ಗಳಲ್ಲಿ ಹರ್ಸಿಲ್ ಹೆಲಿಪ್ಯಾಡ್ಗೆ ಸಾಗಿಸಲಾಗಿದೆ.
ನಾಪತ್ತೆಯಾಗಿರುವ ಉಳಿದ ತರಬೇತಿ ಪರ್ವತಾರೋಹಿಗಳು ಮತ್ತು ಬೋಧಕರಿಗೆ ಹುಡುಕಾಟ ನಡೆಯುತ್ತಿದೆ. ದ್ರೌಪದಿ ಕಾ ದಂಡ ಶಿಖರದಲ್ಲಿ ಕೆಟ್ಟ ಹವಾಮಾನವಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಹೇಳಿದ್ದಾರೆ. ಮಂಗಳವಾರ 41 ಸದಸ್ಯರ ಪವರ್ತಾರೋಹಿಗಳ ಗುಂಪು ದ್ರೌಪದಿ ಕಾ ದಂಡ-2 ಶಿಖರದಿಂದ (5,670 ಮೀ) ಎತ್ತರದ ನ್ಯಾವಿಗೇಷನ್ನಿಂದ ಹಿಂತಿರುಗುತ್ತಿದ್ದಾಗ ಡೊಕ್ರಾನಿ ಬಮಾಕ್ ಹಿಮನದಿ ಸ್ಫೋಟಗೊಂಡಿತ್ತು.