ನ್ಯೂಸ್ ಆ್ಯರೋ : ರಬ್ಬರ್ ಟ್ಯಾಪಿಂಗ್ ಮುಗಿಸಿ ಬರುತ್ತಿದ್ದ ವೇಳೆ ಎಡವಿಬಿದ್ದ ಪರಿಣಾಮ ಟ್ಯಾಪಿಂಗ್ ಕತ್ತಿ ದೇಹವನ್ನು ಹೊಕ್ಕಿದ್ದರಿಂದ ಗಂಭೀರ ಗಾಯಗೊಂಡು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ಮಾ.17ರಂದು ನಡೆದಿದೆ.
ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾ(37 ವ.) ಎಂಬವರು ಬೆಳ್ಳಂಬೆಳಗ್ಗೆ 6.30 ಗಂಟೆ ಹೊತ್ತಿಗೆ ತನ್ನ ಗಂಡನ ಜೊತೆ ತಮ್ಮದೇ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದರು.
ಟ್ಯಾಪಿಂಗ್ ಮಾಡುತ್ತಾ ಹೋಗುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಬೀಳುವಾಗ ಕೈಯಲ್ಲಿದ್ದ ಹರಿತವಾದ ಟ್ಯಾಪಿಂಗ್ ಕತ್ತಿ ಎದೆಯೊಳಗೆ ಹೊಕ್ಕಿದೆ. ಕತ್ತಿ ನುಗ್ಗಿದ ರಭಸಕ್ಕೆ ಕತ್ತಿಯ ಕೈ ಹಿಡಿಯುವ ಜಾಗ ತುಂಡಾಗಿದೆ.
ಗೀತಾ ಅವರು ಕೂಗಿದಾಗ ಗಂಡ ಓಡಿ ಬಂದಿದ್ದು ಕೈ ಭಾಷೆಯಲ್ಲೇ ಕತ್ತಿ ನುಗ್ಗಿದ ಜಾಗ ತೋರಿಸಿದರು ಎನ್ನಲಾಗಿದೆ. ಗಂಡ ಕತ್ತಿಯನ್ನು ಎಳೆದು ತೆಗೆದಾಗ ಗೀತಾ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಮೃತ ಗೀತಾ ಅವರಿಗೆ 8 ನೇ ತರಗತಿ ಓದುತ್ತಿರುವ ಪುತ್ರ ಹಾಗೂ ಪುತ್ರಿ ಎಲ್.ಕೆ.ಜಿ ಅಭ್ಯಾಸ ನಡೆಸುತ್ತಿದ್ದಾರೆ.
ಈ ಕುರಿತು ಮೃತರ ಗಂಡ ಶಿವರಾಮ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..