ಉಪ್ಪಿನಂಗಡಿ : ಹಿರಿಯ ವ್ಯಕ್ತಿಯೊಬ್ಬರ ಮೇಲೆ ಯುವಕರಿಂದ ಮಾರಣಾಂತಿಕ ಹಲ್ಲೆ, ಕೊಲೆಯತ್ನ – ಮೂವರು ಆರೋಪಿಗಳ ವಿರುದ್ದ ಪ್ರಕರಣ ದಾಖಲು

ನ್ಯೂಸ್ ಆ್ಯರೋ : ಕೊಲೆಯತ್ನ, ಹಲ್ಲೆ ಮತ್ತು ದರೋಡೆ ನಡೆಸಿರುವ ಬಗ್ಗೆ ಇಚ್ಲಂಪಾಡಿ ಗ್ರಾಮದ ಅಲಂಗ ನಿವಾಸಿ ಜೋಯಿ ವಿ.ಡಿ.ಎಂಬವರು ನೀಡಿದ ದೂರಿನ ಮೇರೆಗೆ ನವನೀತ್, ರಾಹುಲ್ ಹಾಗೂ ಸುಜಿತ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ :
ಅ.4ರಂದು ರಾತ್ರಿ ಸುಮಾರು 11 ಗಂಟೆಗಳ ವೇಳೆಗೆ ಅಂತ್ಯಸಂಸ್ಕಾರ ಕಾರ್ಯವೊಂದರ ನಿಮಿತ್ತ ಜೋಯ್ ಅವರು ಚರ್ಚ್ನಲ್ಲಿದ್ದ ಸಂದರ್ಭ ಅಲ್ಲಿಗೆ ಬಂದ ಪರಿಚಯದ ನವನೀತ್ ಎಂಬಾತ ಜೋಯ್ ಅವರಲ್ಲಿ ಶಿರಾಡಿ ವರೆಗೆ ತನ್ನನ್ನು ಸ್ಕೂಟರ್ನಲ್ಲಿ ಬಿಡುವಂತೆ ಹೇಳಿದ್ದ.
ಅದರಂತೆ ಸ್ಕೂಟರ್ನಲ್ಲಿ ಹೋಗುತ್ತಿದ್ದ ವೇಳೆ ಶಿರಾಡಿ ಗ್ರಾಮದ ಪುಲ್ಲೋಟು ಎಂಬಲ್ಲಿಗೆ ತಲುಪಿದಾಗ ನವನೀತನು ಸ್ಕೂಟರ್ ನಿಲ್ಲಿಸುವಂತೆ ಜೋಯ್ ಅವರಲ್ಲಿ ಹೇಳಿದ್ದು, ಸ್ಕೂಟರ್ ನಿಲ್ಲಿಸಿದಾಗ ಅಲ್ಲೆ ಪಕ್ಕದಲ್ಲಿ ಅಟೋ ರಿಕ್ಷಾವೊಂದು ನಿಂತಿದ್ದು ರಿಕ್ಷಾದಲ್ಲಿದ್ದ ರಾಹುಲ್ ಹಾಗೂ ಸುಜಿತ್ ಎಂಬವರು ಇಳಿದು ಬಂದು ಬಳಿಕ ಮೂವರು ಸೇರಿಕೊಂಡು ಜೋಯ್ ಅವರಿಗೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಯತ್ನ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿದ್ದರು.
ಈ ಪೈಕಿ ರಾಹುಲ್ ಕೈಯಿಂದ ಕುತ್ತಿಗೆಯ ಹಿಂಬದಿಗೆ ಹಾಗೂ ಮುಖಕ್ಕೆ ಗುದ್ದಿ ಕಾಲಿನಿಂದ ಹೊಟ್ಟೆಗೆ ತುಳಿದು ಚಾಕು ಕುತ್ತಿಗೆಗೆ ಇಟ್ಟು ಕೊಲ್ಲುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ನವನೀತ್ ದೊಣ್ಣೆಯಿಂದ ತಲೆಗೆ ಹಾಗೂ ಬಲಬದಿ ಭುಜಕ್ಕೆ ಹೊಡೆದಿದ್ದು ಸುಜಿತ್ ಕಲ್ಲಿನಿಂದ ಬಲ ಕಾಲಿನ ಮೊಣಗಂಟಿಗೆ ಹೊಡೆದಿದ್ದಾನೆ.
ರಿಕ್ಷಾದಿಂದ ಹಗ್ಗ ತಂದು ಕುತ್ತಿಗೆ ಬಿಗಿದು ಕೊಲ್ಲುವ ಪ್ರಯತ್ನ ಮಾಡಲಾಗಿತ್ತು ಎನ್ನುವ ಆರೋಪ ವ್ಯಕ್ತವಾಗಿದೆ. ಹಣಕ್ಕಾಗಿ ಬೇಡಿಕೆ ಇಟ್ಟ ತಂಡ ನಂತರದಲ್ಲಿ ಜೋಯ್ ಅವರ ಮೊಬೈಲ್ ಹಾಗೂ ಹಣವನ್ನು ದೋಚಿ ಪ್ರವಾಸಿಗರ ಕಾರೊಂದು ಬರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಹಲ್ಲೆಯಿಂದ ಬಲಕಾಲ ಮೊಣಗಂಟಿಗೆ, ಕಾಲು, ಮೂಗು, ಹಣೆಗೆ ತೀವ್ರ ಸ್ವರೂಪದ ಗಾಯ ಹಾಗೂ ಬಲಭುಜಕ್ಕೆ, ಕುತ್ತಿಗೆಯ ಹಿಂಬಾಗ, ಹೊಟ್ಟೆಗೆ, ಎದೆಗೆ ಗುದ್ದಿದ ಗಾಯಗಳಾಗಿವೆ.
ಕೊಲೆಯತ್ನ ಮಾಡಿದ ಯುವಕರ ತಂಡ ಜೊಯ್ ಅವರಲ್ಲಿದ್ದ ಸ್ಕೂಟರನ್ನು ಜಖಂಗೊಳಿಸಿದ್ದರು.
ನಂತರದಲ್ಲಿ ಹಲ್ಲೆಯಿಂದ ಗಂಭೀರ ಗಾಯಗೊಂಡ ಜೋಯ್ ಅವರು ಶೀರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದು ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ನಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದಾರೆ ಎಂದು ಜೋಯ್ ವಿ.ಡಿ.ಯವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.