
ನ್ಯೂಸ್ ಆ್ಯರೋ : ಈ ಬಾರಿ 27 ವರ್ಷಗಳ ಬಳಿಕ ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಲಿದೆ. ಹಾಗಾಗಿ ಅ.25ರಂದು ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸೇವೆಗಳನ್ನು ಬಂದ್ ಮಾಡಲಾಗಿದ್ದು, ಭಕ್ತರಿಗೆ ದರ್ಶನಾವಕಾಶ ಇರುವುದಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ 25ರ ಮಧ್ಯಾಹ್ನ 2.30ರಿಂದ ರಾತ್ರಿ 7.30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆ ನಡೆಯುವುದಿಲ್ಲ. ಭೋಜನ ಪ್ರಸಾದವೂ ಇರುವುದಿಲ್ಲ. 26ರ ಬೆಳಗ್ಗೆ 9 ಗಂಟೆ ನಂತರ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ. ಉಡುಪಿ ಶ್ರೀಕೃಷ್ಣಮಠದಲ್ಲಿ 25ರಂದು ಸೇವೆ ಹಾಗೂ ಭೋಜನ ವ್ಯವಸ್ಥೆ ಇರುವುದಿಲ್ಲ. ಭಕ್ತರು ದೇವರ ದರ್ಶನ ಮಾಡಲು ಯಾವುದೇ ನಿರ್ಬಂಧವಿಲ್ಲ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಂದು ಮಧ್ಯಾಹ್ನದ ಪೂಜೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ನಂತರ ರಾತ್ರಿ 7.30ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಯಾವುದೇ ಸೇವೆಗಳು ಇರುವುದಿಲ್ಲ. ಗ್ರಹಣ ಮೋಕ್ಷ ಬಳಿಕ ರಾತ್ರಿ 7.30ರ ನಂತರ ಮಹಾಪೂಜೆ ನಡೆಯಲಿದೆ.
ಹಾಸನದ ಹಾಸನಾಂಬೆ ದೇವಿ ದರ್ಶನ ಇರುವುದಿಲ್ಲ, ಬೇಲೂರು ಚನ್ನಕೇಶವ ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ಮೇಲುಕೋಟೆ ಚಲುವ ನಾರಾಯಣಸ್ವಾಮಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲವನ್ನು ಸೂರ್ಯಗ್ರಹಣದ ವೇಳೆ ಮುಚ್ಚಲಾಗುತ್ತದೆ.
ಮಂತ್ರಾಲಯದಲ್ಲಿ ದರ್ಶನಕ್ಕೆ ಅವಕಾಶವಿದೆ. ಆದರೆ, ಪೂಜೆ ನಡೆಯುವುದಿಲ್ಲ. ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನಕ್ಕೆ ಪ್ರವೇಶ ಇದ್ದು, ಪ್ರಸಾದ ಇರುವುದಿಲ್ಲ. ಸಿಗಂದೂರೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ.