ಚುನಾವಣಾ ಅಖಾಡಕ್ಕೆ ಪ್ರಧಾನಿ ಮೋದಿ ನಂತರ ಬಿಜೆಪಿಯಿಂದ ಮತ್ತೋರ್ವ ಚಾಯ್ವಾಲಾ – ಯಾರಿದು ಹೊಸ ಚಾಯ್ವಾಲಾ…??

ನ್ಯೂಸ್ ಆ್ಯರೋ : 2014ರಿಂದ ಭಾರತೀಯ ರಾಜಕಾರಣದಲ್ಲಿ ಚಾಯ್ವಾಲಾ ಪದ ಭಾರಿ ಸಂಚಲನ ಸೃಷ್ಟಿಸಿದೆ. ಪ್ರಧಾನಿ ಮೋದಿ ಚಾಯ್ವಾಲಾ ಎಂದು ಟೀಕಿಸಿದ ಕಾಂಗ್ರೆಸ್ ಬಳಿಕ ಅದಕ್ಕೆ ಬೆಲೆ ತೆತ್ತಿದೆ. ಇದೀಗ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮತ್ತೊರ್ವ ಚಾಯ್ವಾಲಾ ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಚಾಯ್ವಾಲ್ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಯಾರು ಈ ಹೊಸ ಚಾಯ್ವಾಲಾ
ಚಾಯ್ವಾಲಾ ಎಂದ ತಕ್ಷಣವೇ ಪ್ರಧಾನಿ ಮೋದಿ ಹೆಸರು ನೆನಪಿಗೆ ಬರುತ್ತದೆ. ಕಾರಣ ಪ್ರಧಾನಿ ಮೋದಿ ತಮ್ಮ ಬಾಲ್ಯದ ದಿನಗಳಲ್ಲಿ ತಂದೆ ಜೊತೆ ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೋದಿಯನ್ನು ಚಾಯ್ವಾಲ್ ಎಂದು ಕರೆದಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಚಾಯ್ ಪೇ ಚರ್ಚಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಇತ್ತ ಮೋದಿ ತಾನು ಚಹಾ ಮಾರಿದ್ದೆ, ತಾನೊಬ್ಬ ಚಾಯ್ವಾಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದೀಗ ಬಿಜೆಪಿಯಿಂದ ಮತ್ತೋರ್ವ ಚಾಯ್ವಾಲಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಚಹಾ ಅಂಗಡಿ ನಡೆಸುತ್ತಿರುವ ಸಂಜಯ್ ಸೂದ್ಗೆ ಬಿಜೆಪಿ ಟಿಕೆಟ್ ನೀಡಿದೆ.
ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಸಂಜಯ್ ಸೂದ್ಗೆ ಟಿಕೆಟ್ ನೀಡಲಾಗಿದೆ. ವಿಶೇಷ ಅಂದರೆ ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದು ಬಂದ ಸುರೇಶ್ ಭಾರದ್ವಾಜ್ ಅವರ ಬದಲು ಸಂಜಯ್ ಸೂದ್ಗೆ ಟಿಕೆಟ್ ನೀಡಲಾಗಿದೆ. ಸಂಜಯ್ ಸೂದ್ ಬಡ ಕುಟುಂಬದಿಂದ ಬಂದ ನಾಯಕರಾಗಿದ್ದು, ಇದೇ ಮೊದಲ ಬಾರಿಗೆ ಚುನಾವಣೆ ಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಶಾಲಾ ದಿನಗಳಲ್ಲಿ ಸಂಜಯ್ ಸೂದ್ಗೆ ಫೀಸ್ ಕಟ್ಟಲು ಹಣ ಇರಲಿಲ್ಲ. ಕಾಲೇಜು ಮೆಟ್ಟಿಲು ಹತ್ತಲು ಮನೆ ಮನೆಗೆ ಪೇಪರ್ ಹಾಕುತ್ತಿದ್ದರು. ಈ ಹಣದಲ್ಲಿ ಶಾಲಾ ಕಾಲೇಜಿನ ಶುಲ್ಕ ಕಟ್ಟಿದ್ದರು. ಕಾಲೇಜು ದಿನಗಳಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಬಳಿಕ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ 1991ರಲ್ಲಿ ಚಹಾ ಅಂಗಡಿ ತೆರೆದರು. ಬಳಿಕ ಚಹಾ ಅಂಗಡಿ, ಪೇಪರ್ ಹಾಕುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಾ ಕುಟುಂಬವನ್ನು ನೋಡಿಕೊಂಡಿದ್ದಾರೆ. ಇದರ ಜೊತೆಗೆ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು.
ಬಿಜೆಪಿ ಪತಾಕೆ ಕಟ್ಟುವುದು, ಸಮಾವೇಶಗಳ ಸಂದರ್ಭದಲ್ಲಿ ಕುರ್ಚಿಗಳನ್ನು ಜೋಡಿಸುವುದು. ಸಮಾವೇಶ ಸ್ಥಳಗಳನ್ನು ಸ್ವಚ್ಚಗೊಳಿಸುವುದು ಸೇರಿದಂತೆ ಹಲವು ಬಿಜೆಪಿಯ ಕೆಲಸಗಳನ್ನು ಚಾಚೂ ತಪ್ಪದೆ ಮಾಡಿದ್ದಾರೆ. ಓರ್ವ ಕಾರ್ಯಕರ್ತನಾಗಿ ಸಕ್ರಿಯವಾಗಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಇದೀಗ ಈ ಕಾರ್ಯಕರ್ತನನ್ನು ಶಿಮ್ಲಾ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ.
ಪಕ್ಷದ ನಿರ್ಧಾರಕ್ಕೆ ಸಂಜಯ್ ಸೂದ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಪೇಪರ್ ಹಾಕುತ್ತಿದ್ದ ಹುಡುಗ, ಚಹಾ ಅಂಗಡಿ ತೆರೆದಿದ್ದೆ, ಬಳಿಕ ಬಿಜೆಪಿ ನಾಯಕರು ನನಗೆ ನೆರವು ನೀಡಿದ್ದಾರೆ. ದೇವರ ಆಶೀರ್ವಾದದಿಂದ ಎಲ್ಲವೂ ಉತ್ತಮವಾಗಿದೆ. ಇದೀಗ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿರುವುದು ಅತೀವ ಸಂತಸ ತಂದಿದೆ. ಓರ್ವ ಸಾಮಾನ್ಯ ಕಾರ್ಯಕರ್ತ, ಆರ್ಥಿಕವಾಗಿ ನಾನು ಸದೃಢನಲ್ಲ. ನನ್ನಂತ ವ್ಯಕ್ತಿಗೆ ಬಿ.ಜೆ.ಪಿ.ಟಿಕೆಟ್ ನೀಡಿದೆ. ಇದು ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದಿದ್ದಾರೆ.